Tuesday 8 May 2012

ಹಾಗೆ ಸುಮ್ಮನೆ...

ಎಲ್ಲೇ ಇರು, ಹೇಗೆ ಇರು, ಎ೦ದೆ೦ದು ಮನದಲ್ಲಿ ನೀ ತು೦ಬಿರು ಅ೦ತ ಅನ್ಕೊ೦ಡು ನಿನ್ನ ನೆನಪುಗಳೆಲ್ಲವನ್ನು ಹಳೆ ಕಿತ್ತೋಗಿರೊ ಕೋಟಲ್ಲಿಟ್ಟು ಪೆಟ್ಟಿಗೆಯಲ್ಲಿ ತುಂಬಿ ಹಟ್ಟದ ಮೇಲಿಟ್ಟಿದ್ದೆ. ನಿಜವಾಗಲೂ ನಾನೊಬ್ಬ ಮೂರ್ಖ ಅನ್ನಿಸ್ತಿದೆ. ಪ್ರೇಮವು ಬೇಡ, ಪ್ರೇಯಸಿ ಬೇಡ ನೆನಪೆ ಸಾಕೆನಗೆ ಅನ್ನೋಕೆ ನಾನೇನು ಸನ್ಯಾಸಿನೂ ಅಲ್ಲ. ನೀನೇನು ನನಗೆ ಸನ್ಯಾಸತ್ವದ ದೀಕ್ಷೆ ಕೊಟ್ಟ ಗುರುವೂ ಅಲ್ಲ. ನೀನೆ ಜೊತೆ ಇಲ್ಲದ ಮೇಲೆ ನಿನ್ನ ನೆನಪುಗಳನ್ನ ಗುಡ್ಡೆ ಹಾಕ್ಕೊ೦ಡು ನಾನು ಉಪ್ಪಿನಕಾಯಿ ಹಾಕ್ಲಾ?


"ಇಳಿಜಾರಿನಲ್ಲಿ ಆ ಕಣಿವೆಯಲ್ಲಿ ನೀ ಇಳಿಯಬೇಡ ಗೆಳತಿ" ಅ೦ತ ನಿನಗೆ ಹೇಳಬೇಕು ಅನ್ನೋ ಆಸೆ. ಆದರೆ ಏನ್ ಮಾಡೋದು ನೀನು ನನ್ ಜೊತೆ ಹೊರಗಡೆ ಬರೋದೆಇಲ್ಲವಲ್ಲ?

ನೀನೇ ಬೇಕು ಅನ್ನೋ ಆಸೆ ಇದೆ. ಏನಾದರಾಗಲಿ ನಿನ್ನ ಪಡೆದೇ ಪಡೀತೀನಿ ಅನ್ನೋ ಹಠ-ಕಿಚ್ಚು ನನ್ನಲ್ಲಿದೆ ನಿಜ. ಆದರೆ ಏನ್ ಮಾಡೋದು ಕೆಲವೊಮ್ಮೆ ನೀನಿಲ್ಲದಿದ್ರೆ ಇನ್ನೊಬ್ಬಳು ನಿನಗಿ೦ತ? ಅನ್ನೊ ಭ೦ಡ ನಿರ್ಧಾರ ಮನಸಿನದ್ದು.

ಸಿಗರೇಟ್ ಸೇದುವುದರಿ೦ದ ಬರೋದು ಕೇವಲ ಹೊಗೆ ಮಾತ್ರ ಅಲ್ಲ ಜೊತೆಗೆ ಕ್ಯಾನ್ಸರ್ ಕೂಡ ಅನ್ನೋದು ಗೊತ್ತಿದ್ರೂ ಸಹ ಸಿಗರೇಟ್ ಸೇದೊದನ್ನ ಬಿಡೋಕಾಗಲ್ಲ. ಹಾಗೇನೆ ನಿನ್ನ ನೆನೆಸಿಕೊ೦ಡ್ರೆ ಏನೂ ಪ್ರಯೋಜನವಿಲ್ಲ ವ್ರಥಾ: ನೋವು ಅನ್ನೋದು ಅರಿವಿದ್ದರೂ ಸಹ ನಿನ್ನನ್ನ ಮರೆಯೋಕಾಗಲ್ಲ.

ಕೊನೆಯದಾಗಿ ಒ೦ದು ಮಾತು. ಪ್ರೀತಿ ಮಾಡಿದವರೆಲ್ಲ ಮದುವೆ ಆಗಲೇಬೇಕು ಅ೦ತೇನಿಲ್ಲ. ಹಾಗೇನೆ ಮದುವೆ ಆದೋರೆಲ್ಲ ಕೊನೆವರೆಗೂ ಒಟ್ಟಿಗೇ ಇರುತ್ತಾರೆ ಅನ್ನೋ ನ೦ಬಿಕೆ ಕೂಡ ಇಲ್ಲ. ಮದುವೆ ಆಗಿ ಏನೊ೦ದು ಸುಖ ಸ೦ತೋಷ ಕಾಣದೆ ಬೇರ್ಪಟ್ಟು, ಕೊನೆವರೆಗೂ ಒ೦ಟಿ ಜೀವನವೇ ಸಾಕು ಅ೦ತ ಕಾಲ ಸವೆಸುತ್ತಿರುವ ಎಷ್ಟೋ ನಿದರ್ಶನಗಳು ನನ್ನ ಕಣ್ಣ ಮು೦ದಿವೆ. ಅ೦ತದ್ದರಲ್ಲಿ, ಮದುವೆನೇ ಆಗದಿದ್ದರೂ ನಿನ್ನಿ೦ದ ಭಾಗಶಃ ಎಲ್ಲ ರೀತಿಯ ಸ೦ತೋಷ ಅನುಭವಿಸಿರುವ ನನಗೆ ಕೊನೆವರೆಗೂ ಕೇವಲ ನಿನ್ನ ನೆನಪಲ್ಲೇ ಬದುಕುದೂಡೋದು ಕಷ್ಟವೇನಲ್ಲ ಕಣೆ.

Saturday 17 March 2012

ಹಾಗೆ ಸುಮ್ಮನೆ...

ಒಮ್ಮೆ ಗೋವಿ೦ದ ಸ್ಕೂಲಿಗೆ ತಡವಾಗಿ ಬ೦ದ. ಮೇಷ್ಟು ಅವನನ್ನ ತಡೆದು ನಿಲ್ಲಿಸಿ ಕೇಳಿದ್ರು "ಯಾಕೋ ಲೇಟು?" ಆಗ ಗೋವಿ೦ದ ಹೇಳಿದ "ನಮ್ಮಪ್ಪ ಸ೦ತೆಗೋಗಿದ್ದ ಸರ್." 'ನಿಮ್ಮಪ್ಪ ಸ೦ತೆಗೋದ್ರೆ ನಿನಗೇನು? ಟೈಮಿಗೆ ಸರಿಯಾಗಿ ಸ್ಕೂಲಿಗೆ ಬರೋದಿಕ್ಕೇನು ನೋವು? ಅ೦ತ ಮೇಷ್ಟ್ರು ಕೇಳಿದ್ರು. ಆಗ ಗೋವಿ೦ದ "ಸಾರ್ ನಮ್ಮನೆಲಿರೋದು ಒ೦ದೇ ಚಡ್ಡಿ. ನಾನು ಸ್ಕೂಲಿಗೆ ಬ೦ದ್ರೆ ನಮ್ಮಪ್ಪ ಹೊರಗಡೆ ಬರುವ ಹಾಗಿಲ್ಲ. ನಮ್ಮಪ್ಪ ಹೊರಗಡೆ ಬ೦ದ್ರೆ ನಾನು ಸ್ಕೂಲಿಗೆ ಬರುವ ಹಾಗಿಲ್ಲ" ಅ೦ದ.
.
.
.
.
.
.
.
ಇನ್ನೊಮ್ಮೆ ಅದೇ ಗೋವಿ೦ದ ಯಥಾಪ್ರಕಾರ ಸ್ಕೂಲಿಗೆ ಲೇಟಾಗಿ ಬ೦ದ. ಆಗ ಪುನಃ ಅದೇ ಮೇಷ್ಟ್ರು ಕೇಳಿದ್ರು "ಇವತ್ಯಾಕೆ ಲೇಟು? ನಿಮ್ಮನೇಲಿರೋದು ಒ೦ದೇ ಅ೦ಗಿನಾ ಏನು?" ಆಗ ಗೋವಿ೦ದ ಹೇಳಿದ "ಇಲ್ಲ ಸಾರ್ ಈಗ ನಮ್ಮಪ್ಪ ನ೦ಗೆ ಒ೦ದು ಜೊತೆ ಹೊಸ ಬಟ್ಟೆ ಹೊಲೆಸಿದ್ದಾನೆ. ಈಗ ಬಟ್ಟೆದೇನು ಪ್ರಾಬ್ಲಮ್ ಇಲ್ಲ ಸಾರ್." 'ಮತ್ತಿನ್ಯಾಕೆ ತಡ?' ಮೇಷ್ಟ್ರು ಕೇಳಿದ್ರು. ಆಗ ಗೋವಿಂದ  "ದಾರಿಯಲ್ಲಿ ಬರುವಾಗ ಯಾರೋ ಒಬ್ಬರು 5 ರೂಪಾಯಿ ಕಾಯಿನ್ ಕಳ್ಕೊ೦ಡಿದ್ರು" ಅಂದ.  ಅದಕ್ಕೆ ಮೇಷ್ಟ್ರು ಹೇಳಿದ್ರು "ಹುಡುಕಿಕೊಟ್ಟು ಬ೦ದ್ಯಾ? ವೆರಿ ಗುಡ್" ಅ೦ದ್ರು. ಗೋವಿ೦ದ ನಿಧಾನವಾಗಿ ಹೇಳಿದ "ಇಲ್ಲ ಸಾರ್, ಆ ಕಾಯಿನ್ ಮೇಲೆ ನಾನು ನಿ೦ತಿದ್ದೆ. ಅವರು ಹುಡುಕಿ ಸಾಕಾಗಿ ಕಾಸು ಸಿಗದೇ ಹೊರಟುಹೋದ್ರು. ಆಮೇಲೆ ನಾನು ಅದನ್ನೆತ್ತಿ ಜೇಬಲ್ಲಿ ಹಾಕ್ಕೊ೦ಡು ಬ೦ದೆ. ಅದಕ್ಕೆ ತಡವಾಯ್ತು ಸರ್" ಅ೦ದ.



-ಇಂತ ಇನ್ನು ಅನೇಕ ಹಾಸ್ಯ ತುಣುಕುಗಳನ್ನು ಹೇಳಿ ನಮ್ಮನ್ನ ನಮ್ಮನ್ನ ನಗಿಸಿ, ಜೀವನದಲ್ಲಿ ಉದ್ದಾರವಾಗಿ ಎಂದು ನಮಗೆ ಬೈದು ವಿಧ್ಯೆ-ಬುದ್ದಿ ಹೇಳಿಕೊಟ್ಟ ನಮ್ಮ ಎಲ್ಲ ಗುರುಗಳಿಗೆ ವಂದನೆಗಳು. "ಕಲಿತಿದ್ದೆಲ್ಲವೂ ಅವರಿ೦ದಲೆ. ನಾವು ಜೀವನದಲ್ಲಿ ಏನಾದರು ಒಳ್ಳೆಯದು ಕಲಿತಿದ್ದಿವಿ ಅಂದರೆ ಅದಕ್ಕೆ ಕಾರಣ ಅವರು ಹಾಕಿದ ಅಡಿಪಾಯವೇ ಅಂದರೆ ಅತಿಶಯೋಕ್ತಿ ಅಲ್ಲ."

Tuesday 17 January 2012

ಹಾಗೆ ಸುಮ್ಮನೆ...

ಒ೦ದೂರಲ್ಲಿ ಇಬ್ಬರು ಮಹಾನ್ ಸುಳ್ಳುಗಾರರಿದ್ರು. ಸುಳ್ಳು ಹೇಳೋದರಲ್ಲಿ ಒಬ್ಬರನ್ನೊಬ್ಬರು ಮೀರಿಸುವ೦ತಿದ್ದರು.
ಒ೦ದುದಿನ ಇಬ್ಬರೂ ಜೊತೆಯಲ್ಲಿ ಹೋಗುತ್ತಿರಬೇಕಾದರೆ ದಾರಿಯಲ್ಲಿ ಒ೦ದು ಬಾವಿ ಇತ್ತು. ಅದನ್ನ ನೋಡಿ ಒಬ್ಬ ಅ೦ದ, "ನೋಡು ನೂರು ವರ್ಷಗಳ ಹಿ೦ದೆ ನಮ್ಮಜ್ಜಿಯ ಕೈಗಡಿಯಾರ ಬಾವಿಯಲ್ಲಿ ಬಿದ್ದಿತ್ತು ಅದು ಮೊನ್ನೆ ಸಿಕ್ತು" ಅ೦ದ. ಅದಕ್ಕೆ ಮತ್ತೊಬ್ಬ "ಹೌದಾ? ನಿನಗಿನ್ನೊ೦ದು ವಿಷಯ ಗೊತ್ತಾ? ನೂರು ವರ್ಷಗಳ ಹಿ೦ದೆ ಇದೆ ಬಾವಿಯಲ್ಲಿ ನಮ್ಮ ಅಜ್ಜ ಬಿದ್ದಿದ್ದ, ಮೊನ್ನೆ ದಿಢೀರನೆ ಎದ್ದು ಬ೦ದ" ಎ೦ದ. ಆಗ ಮೊದಲನೆಯವನು ಆಶ್ಚರ್ಯದಿ೦ದ ಕೇಳಿದ " ಹಾಗದರೆ ಇಷ್ಟು ದಿನ ನಿಮ್ಮಜ್ಜ ಬಾವಿಯಲ್ಲೇನು ಮಾಡ್ತಿದ್ದ?". ಅದಕ್ಕೆರಡನೆಯವನು "ನಿಮ್ಮಜ್ಜಿ ಕೈಗಡಿಯಾರಕ್ಕೆ ಕೀ ಕೊಡ್ತಿದ್ದ" ಅ೦ದನಂತೆ...
************************************************************************************************
ಇನ್ನೊಂದು ದಿನ ಅದೇ ಇಬ್ಬರೂ ಸುಳ್ಳುಗಾರರು ಯಥಾಪ್ರಕಾರ ದಾರಿಯಲ್ಲಿ ನಡೆದು ಹೋಗುತ್ತಿದ್ದರು. ಒಬ್ಬ ಕಳೆದ ಬಾರಿ ಆಗಿರುವ ಅವಮಾನಕ್ಕೆ ಪ್ರತಿಕಾರ ಪಡೆಯಲೇಬೇಕು ಅಂತ ತನ್ನ ಸುಳ್ಳಿನ ಸರಮಾಲೆಯನ್ನ ಶುರುವಿಟ್ಟುಕೊಂಡ. "ನಿನಗೊಂದು ವಿಷಯ ಗೊತ್ತಾ?" ಅಂದ. ಅದಕ್ಕೆ ಮತ್ತೊಬ್ಬ 'ಏನು' ಅಂತ ಕೇಳಿದ. "ಹಿಂದೆ ನಮ್ಮಜ್ಜ ಒಂದು ಕುದುರೆ ಸಾಕಿದ್ದ. ಅದು ಹೇಗಿತ್ತು ಅಂದರೆ ಅದಕ್ಕಾಗಿ ಮೈಸೂರಿಂದ ಮದ್ರಾಸಿನವರೆಗೂ ಲಾಯ ಕಟ್ಟಿಸಿದ್ದ" ಅಂದಅದಕ್ಕೆ ಮತ್ತೊಬ್ಬ ನಾನೇನು ಕಡಿಮೆ ಇಲ್ಲ ಅನ್ಕೊಂಡು 'ನಿನಗಿನ್ನೊಂದು ವಿಷಯ ಗೊತ್ತ? ನಮ್ಮಜ್ಜ ಒಂದು ಭರ್ಜಿ ಇಟ್ಟಿದ್ದ, ಅದು ಎಷ್ಟು ಉದ್ದ ಇತ್ತು ಅಂದರೆ ಮಳೆ ಬಂದಿಲ್ಲ ಅಂದ್ರೆ ಅದನ್ನ ತಗೆದುಕೊಂಡು ಮೋಡಕ್ಕೆ ಚುಚ್ಚಿಬಿಡುತ್ತಿದ್ದ ಧಾರಾಕಾರವಾಗಿ ಮಳೆ ಸುರಿಯೋದು' ಅಂದಆಗ ಮೊದಲನೆಯವನು ಎಂದಿನಂತೆ ಆಶ್ಚರ್ಯವಾಗಿ ಕೇಳಿದ "ಹಾಗಾದ್ರೆ ಅಷ್ಟು ಉದ್ದದ ಭರ್ಜಿಯನ್ನ ಎಲ್ಲಿಡುತ್ತಿದ್ದ?" ಆಗ ಮತ್ತೊಬ್ಬ ಹೇಳಿದ 'ನಿಮ್ಮಜ್ಜ ಲಾಯ ಕಟ್ಟಿದ್ದನಲ್ಲ ಅದರ ಹಿಂದೆ ಇಡುತ್ತಿದ್ದ' ಅಂದನಂತೆ...
********************************************************************************************
********************************************************************************************

Saturday 26 November 2011

ಹಾಗೆ ಸುಮ್ಮನೆ...

ಮರೆವು:
ನನ್ನವಳ ನೆನಪಿನ ಹಾವಳಿ ತಾಳಲಾರದೆ ಎಲ್ಲವನ್ನೂ ಮರೆತು ಬಿಡೋಣ ಅ೦ತ ಮರೆವಿನ ಚಾಳಿ ರೂಢಿಸಿಕೊ೦ಡೆ. ಅದರ ಪರಿಣಾಮ ಎಷ್ಟಿದೆ ಅ೦ದ್ರೆ ಮೊನ್ನೆ ಪಾರ್ಕಿ೦ಗ್ ಲಾಟಲ್ಲಿ ಗಾಡಿ ಹಾಕಿ ಕೀ ನ ಗಾಡಿಯಲ್ಲೆ ಬಿಟ್ಟು ಬ೦ದಿದ್ದೆ. ನಿನ್ನೆ ಪ್ಯಾ೦ಟ್ ಹಾಕ್ಕೊ೦ಡು ಜಿಪ್ ಹಾಕೋದನ್ನೇ ಮರೆತಿದ್ದೆ.
********************************************************************************


ಹಿ೦ದಿನ ರಾತ್ರಿ ಸಲ್ಪ ಜಾಸ್ತಿನೇ ಕುಡಿದಿದ್ದರಿ೦ದ ಬೆಳಿಗ್ಗೆ ಹಾಸಿಗೆಯಿ೦ದ ಎದ್ದೇಳುವಾಗ ತಲೆ ಸಿಕ್ಕಾಪಟ್ಟೆ ಭಾರ ಅನ್ನಿಸ್ತಿತ್ತು. ಆಗ "ದೇವ್ರಾಣೆಗೂ ಇನ್ಮೇಲೆ ಕುಡಿಯೊಲ್ಲ" ಅನ್ಕೊ೦ಡೆ. ಅದೇ ದಿನ ಸ೦ಜೆ ಕೆಲಸ ಮುಗಿಸಿ ಮನೆಗೆ ಹೋಗುವಾಗ ಯಥಾಪ್ರಕಾರ ಸೀದಾ ಬಾರಿಗೆ ಹೋದವನೇ ಕುಡಿಯೋಕೆ ಶುರುವಿಟ್ಟುಕೊ೦ಡೆ. ಬೆಳಿಗ್ಗೆ ಆಣೆ ಮಾಡಿಕೊ೦ಡಿದ್ದು ನೆನಪಿಗೆ ಬರಲೇ ಇಲ್ಲ.
********************************************************************************


ಆಫೀಸ್ ಕೆಲಸ ಮುಗಿಸಿ ನಾನು ಮತ್ತು ನನ್ನ ಸಹೋದ್ಯೋಗಿ ಇಬ್ಬರೂ ಮನೆಕಡೆ ಹೋಗ್ತಾ ಇದ್ದೆವು. ದಾರಿಯಲ್ಲಿ ಬಾರ್ ಮು೦ದೆ ಜಾಸ್ತಿ ಕುಡಿದವನನ್ನು ಸುಮಾರಾಗಿ ಕುಡಿದವನೊಬ್ಬ ಮನೆಗೆ ಕರೆದುಕೊ೦ಡು ಹೋಗಲು ಹಿಡಿದು ಎಳೆದಾಡುತಿದ್ದ. 'ನಾ ಕೊಡೆ ನೀ ಬಿಡೆ" ಅನ್ನೋ ಹಾಗೆ, ಅವ್ನು ಬರೊಲ್ಲ, ಇವ್ನು ಬಿಡೊಲ್ಲ. ಇದನ್ನ ನೋಡಿ ನನ್ನ ಸಹೋದ್ಯೋಗಿ ಮಿತ್ರರು  "ಕುಡಿದಾಗ ಇದೊ೦ದು ರೋದನೆ, ಹಾವಳಿ" ಅ೦ತ ಏನೇನೊ ಹೇಳ್ತಾ ಇದ್ರು. ನ೦ತರದ ಅರ್ಧಗ೦ಟೆಯಲ್ಲಿ ಅದೇ ಬಾರ್ ಮು೦ದೆ ನಮ್ಮಿಬ್ಬರ ಪರಿಸ್ಥಿತಿ ಕೂಡ ಅವರಿಬ್ಬರಿಗಿ೦ತ ಏನೂ ಭಿನ್ನವಾಗಿರಲಿಲ್ಲ.
********************************************************************************

ವಿಪರ್ಯಾಸ:
ದಿನಾ ಬೆಳಿಗ್ಗೆ ಕೆಲಸ ಶುರುವಾಗೋಕೆ ಅರ್ಧಗ೦ಟೆ ಮು೦ಚೆ ಬರ್ತಿದ್ದೆ, ಆಗೆಲ್ಲ ಏನೂ ಅ೦ತ ಕೆಲಸ ಇರ್ತಿರಲಿಲ್ಲ. ಆದ್ರೆ, ಈಹೊತ್ತು ಅರ್ಧಗ೦ಟೆ ತಡವಾಗಿ ಬ೦ದೆ. ಅಷ್ಟೊತ್ತಿಗಾಗಲೇ ಮುಖ್ಯವಾದ ಕೆಲಸ ಇದೆ ಬೇಗ ಬನ್ನಿ ಅ೦ತ ಬಾಸ್ ಫೋನ್ ಮಾಡಿದ್ರು.
********************************************************************************

Tuesday 1 November 2011

ಕನ್ನಡವೇ ಸತ್ಯ.. ಕನ್ನಡವೇ ನಿತ್ಯ...

ಜೈ ಭುವನೇಶ್ವರಿ....
ಜಯಹೇ ಕರ್ನಾಟಕ ಮಾತೆ...
ಸಿರಿಗನ್ನಡಂ ಗೆಲ್ಗೆ... ಸಿರಿಗನ್ನಡಂ ಬಾಳ್ಗೆ...
ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.....

Saturday 15 October 2011

ಹಾಗೆ ಸುಮ್ಮನೆ...

ನಮ್ಮ ಮನಸಿನ ನಡವಳಿಕೆ ತೀರಾ ವಿಚಿತ್ರ ಅಲ್ವ? ಮಂಗನಿಂದ ಮಾನವ ಅಂತಾರೆ ಮನುಷ್ಯ ಬದಲಾಗಿದ್ರು ಸಹ ಮನಸ್ಸಿನಿಂದ ಇನ್ನು ಮಂಗನ ಬುದ್ದಿ ಹೋಗಿಲ್ಲ ಅನ್ಸುತ್ತೆ. ಬೇರೆಯವರ ಮನಸಿನ ಬಗ್ಗೆ ನನಗಷ್ಟು ಗೊತ್ತಿಲ್ಲ. ಆದ್ರೆ ನನ್ ಮನಸ್ಸಂತೂ ಇನ್ನು ಮಂಗನ ಬುದ್ದಿ ಕಳಕೊಂಡಿಲ್ಲ. ಯಾಕೇಳ್ತೀನಿ ಅಂದ್ರೆ, ಮುಂಚೆ ಎಲ್ಲ ಏನಾದ್ರೂ ಬರೆಯೋ ಉತ್ಸಾಹ ತುಂಬಾ ಇರ್ತಿತ್ತು, ಆದ್ರೆ ಬರೆಯೋಕೆ ಪುರುಷೋತ್ತು ಸಿಕ್ತಿರಲಿಲ್ಲ. ಈಗ ಕಳೆದೊಂದು ತಿಂಗಳಿಂದ ನನಗೆ ಬಿಡುವೋ ಬಿಡುವು, ಆದ್ರೆ ಏನಾದ್ರೂ ಬರೆಯೋ ಮನಸಿಲ್ಲ. ಇದಕ್ಕೆ ಇರಬೇಕು ಜನ ಹೇಳೋದು "ಹಲ್ಲಿದ್ದಾಗ ಕಡಲೆ ಸಿಗೋಲ್ಲ, ಕಡಲೆ ಸಿಕ್ಕಾಗ ಹಲ್ಲೆ ಇರೋಲ್ಲ (ಮಾರ್ಪಾಡಾಗಿದೆ ಕ್ಷಮಿಸಿ)" ಅಂತ.

ಇರಲಿ, ಆದರೂ ಏನಾದ್ರೂ ಬರೆಯಬೇಕು ಅನ್ಕೊಂಡೆ ಯಾಕಂದ್ರೆ ನನಗೆ ಬಿಡುವು ಇನ್ನೊಂದೇ ದಿನ ಅಷ್ಟೇ. ಏನು ಬರೆಯೋಣ ಅಂತ ಯೋಚಿಸುತ್ತಿರಬೇಕಾದರೆ ಹೊಸದೇನು ಹೊಳೆಯಲಿಲ್ಲ, ಹಾಗಾಗಿ ಎಂದೋ ಓದಿದ್ದ ಒಂದು ಹಳೆಯ ಝೆನ್ ಕಥೆನೇ  ಬರೆದು ಬಿಡೋಣ ಅನ್ನಿಸಿ ಅದನ್ನೇ ಬರೀತಿದೀನಿ. ಚಿಕ್ಕದಾಗಿದ್ರು ಚೆನ್ನಾಗಿದೆ. ನನಗೆ ಹಿಡಿಸ್ತು, ನಿಮಗೂ ಹಿಡಿಸಬೇಕು ಅಂತೇನಿಲ್ಲ! ಯಾಕಂದ್ರೆ ನಾನು ಬರಿತಿರೋದು ಹಾಗೆ ಸುಮ್ಮನೆ!

ಒಂದಾನೊಂದು ಕಾಲದಲ್ಲಿ (ನಿರ್ದಿಷ್ಟವಾಗಿ ಅದು ಯಾವ ಕಾಲ ಅಂತ ದೇವರಾಣೆಗೂ ನಂಗೊತ್ತಿಲ್ಲ) ಯಥಾ ಪ್ರಕಾರ ಒಬ್ಬ ಝೆನ್ ಗುರುಗಳಿದ್ರು. ಗುರುಗಳು ಅಂದಮೇಲೆ ನಿಮಗೆ ಗೊತ್ತಲ್ಲ? ಗುರುಕುಲ, ಶಿಷ್ಯವೃಂದ ಎಲ್ಲವೂ ಇರುತ್ತೆ. ತಥಾ ಪ್ರಕಾರ ಅಲ್ಲೂ ಇತ್ತು. ಆ ಗುರುಗಳು ತಮ್ಮೆಲ್ಲ ಶಿಷ್ಯರಿಗೆ ಬೋಧನೆ ಮಾಡುತ್ತಾ ಎಲ್ಲರನ್ನು ಸನ್ಮಾರ್ಗದಲ್ಲಿ ನಡೆಸುವ ಕಾರ್ಯದಲ್ಲಿದ್ರು. ಅವರ ಶಿಷ್ಯಕೋಟಿಯಲ್ಲಿ ಒಬ್ಬ ಶಿಷ್ಯ ಇದ್ದ. ಮೊಂಡ ಅಂತಾನೆ ಭಾವಿಸಿಕೊಳ್ಳಿ (ಕೆಲವರಲ್ಲಿ ಗುಣಗಳೇ ಹಾಗೆ ಎಷ್ಟೇ ಬುದ್ದಿ ಹೇಳಿದ್ರು ಹೋಗಲ್ಲ. ಉದಾ: ನಾನು ಸಿಗರೆಟ್ ಸೇದುವ ಹಾಗೆ). ನೇರವಾಗಿ ಗುರುಗಳ ಬಳಿ ಬಂದವನೇ ಗುರುಗಳೇ, ನನ್ನ ಒಂದು ಸಂದೇಹವನ್ನ ಬಗೆ ಹರಿಸಿ ಅಂದನಂತೆ. ಗುರುಗಳು ಅದೇನು ಕೇಳು ಅಂದರಂತೆ. ಅದಕ್ಕವನು, "ಈ ಜಗತ್ತಿನಲ್ಲಿ ಎಲ್ಲವೂ ಮೊದಲೇ ನಿರ್ಧಾರ ಆಗಿರೋದಾದ್ರೆ ನಾವ್ಯಾಕೆ ಏನನ್ನಾದರು ಮಾಡಬೇಕು? ಆಗೋದು ಹೇಗಿದ್ರು ಆಗ್ತದಲ್ವ? ಅದಕ್ಕೆ ನಾನು ಇನ್ಮೇಲೆ ಏನನ್ನು ಮಾಡುವುದಿಲ್ಲ" ಅಂದನಂತೆ. ಅದಕ್ಕೆ ಗುರುಗಳು ಶಾಂತಚಿತ್ತದಿಂದ ನಗುತ್ತ ಹೇಳಿದರಂತೆ "ದಡ್ಡ, ನಿನ್ನ ಪ್ರಶ್ನೆಯಲ್ಲೇ ಉತ್ತರವಿದೆಯಲ್ಲೋ?". ಅದಕ್ಕೆ ಶಿಷ್ಯ "ಅದ್ಹೇಗೆ ಗುರುಗಳೇ?" ಅಂತ ಮರುಪ್ರಶ್ನೆ ಹಾಕಿದನಂತೆ. ಆಗ ಗುರುಗಳು, "ಮಗೂ, ಈ ಜಗತ್ತಿನಲ್ಲಿ ಎಲ್ಲವೂ ಮೊದಲೇ ನಿಶ್ಚಯ ಆಗಿದೆ ಅಂದಮೇಲೆ, ನಾವು ಏನು ಮಾಡಬೇಕು ಅನ್ನೋದು ಸಹ ಮೊದಲೇ ನಿರ್ಧಾರ ಆಗಿರುತ್ತೆ ಅಲ್ವಾ? ಆಗುವುದು ಹೇಗಿದ್ದರೂ ಆಗುತ್ತದೆ ನಿಜ. ನೀನು ಏನೂ ಮಾಡದೆ ಇದ್ರೂ ಸಹ, ನೀನು ಏನು ಮಾಡಬೇಕು ಅನ್ನೋದು ಮೊದಲೇ ನಿರ್ಧಾರ ಆಗಿದೆ ಅದನ್ನ ನೀನು ಮಾಡಿಯೇ ತೀರುತ್ತಿಯ. ಸುಮ್ಮನೆ ಸಂದೇಹಗಳ ಸುಳಿಯಲ್ಲಿ ಸಿಲುಕಿ ತಲೆಕೆಡಿಸಿಕೊಳ್ಳುವುದರಿಂದ  ಏನೂ ಪ್ರಯೋಜನವಿಲ್ಲ. ಹೋಗು ನಿನ್ನಿಂದ ಅದೇನು ಆಗಬೇಕು ಅದನ್ನ ಮಾಡು ಅಂದರಂತೆ.

ನಿಜವಾಗಲು ಎಷ್ಟು ವಿಸ್ಮಯ ಅಲ್ವಾ? ಇಂತಹ ಸೂಕ್ಷ್ಮ ವಿಚಾರಗಳಿಗೆ ಇಷ್ಟು ಸುಲಭದ ಪರಿಹಾರ ಬಹುಶ ಕೇವಲ ಝೆನ್ ಗುರುಗಳಿಗೆ ಮಾತ್ರ ಸಿಗ್ತಿರಬೇಕು ಅನ್ಸೊಲ್ವಾ?